Pages

Wednesday, January 15, 2014

Sri Dattatreya Stotra

ಮಾಲಕಮಂಡಲು  ಧರಃ ಕರಪದ್ಮಯುಗ್ಮೆ 
ಮಧ್ಯಸ್ಥಪಾಣಿಯುಗಲೇ  ಡಮರುತ್ರಿಶೂಲೇ ।
ಯಸ್ಯಸ್ತ ಊರ್ಧ್ವಕರಯೋಃ ಶುಭಶಂಖಚಕ್ರೆ 
ವಂದೇ ತಮತ್ರಿವರದಂ  ಭುಜಷಟ್ಕಯುಕ್ತಂ ।।

ಅರ್ಥ - ಕೆಳಗಿನವೆರಡು  ಕೈಗಳೆಂಬ  ಕಮಲಗಳಲ್ಲಿ ರುದ್ರಾಕ್ಷ ಮಾಲೆ , ಕಮಂಡಲಗಳೂ  ನಡುವಿನವೆರಡು  ಕೈಗಳಲ್ಲಿ ಡಮರು ತ್ರಿಶೂಲಗಳೂ  ಮತ್ತು ಯಾವಾತನ  ಮೇಲಿನವೆರಡು  ಕೈಗಳಲ್ಲಿ ಶುಭಪ್ರದವಾದ  ಶಂಖ - ಚಕ್ರಗಳೂ  ಉಂಟೋ  ಅಂತಹ ಆರು ಭುಜಗಳುಳ್ಳ  ಅತ್ರಿಋಷಿಗೆ  ವರಪ್ರದನಾದವ  (ದತ್ತ ) ನನ್ನು  ವಂದಿಸುವೆ .

                  ಪರಮಭಾಗವತರಾದ ನಾರದ ಮಹರ್ಷಿಗಳು  ಬ್ರಹ್ಮನ  ಮಾನಸ ಪುತ್ರರು . ಯಾವಾಗಲೂ ಭಗವಂತನ ಪರಮ ಪವಿತ್ರವಾದ ನಾಮವನ್ನುಚ್ಚರಿಸುವಂತಹ  ಪುಣ್ಯ ಪುರುಷರು . ಆದರೆ ಅವರು " ಕಲಹಪ್ರಿಯೋನಾರದಃ " ಕಲಹಪ್ರಿಯರು ಎಂಬ ಹೆಸರನ್ನು ಪಡೆದರು . ಈ ಹೆಸರು ಅವರಿಗೆ ನಿಂದಾವ್ಯಂಜಕವಾಗಿರಲಿಲ್ಲ . ಯಾಕೆಂದರೆ ಅವರಿಂದ ಉಂಟಾಗುವ ಕಲಹಗಳು ಮೋಜಿಗಾಗಿರದೆ , ಪರಿಣಾಮದಲ್ಲಿ ಎರಡೂ  ಪಕ್ಷಗಳಿಗೆ  ಕಲ್ಯಾಣಕರವೂ  ಜಗತ್ತಿಗೆ ಹಿತಪ್ರದವೂ ಆಗಿರುತ್ತಿದ್ದವು . ಆದ್ದರಿಂದ  ಈ ಹೆಸರು ಒಂದು ಬಗೆಯಿಂದ ವಂದ್ಯವೇ  ಆಗಿತ್ತು . ಜಗತ್ತಿನ ಕಲ್ಯಾಣಕ್ಕಾಗಿ  ಅವತರಿಸಿದ ಸಂತರಿಂದ - ಮಹಂತರಿಂದ  ಒದಗುವ ಕರ್ಮವು  ಹೇಯವೆಂತಾದೀತು ? 'ಪರಿಣಾಮೆ ಅಮೃತೋಪಮಂ ' ಎಂಬಂತೆ  ಕೊನೆಗೆ ಹಿತಪ್ರದವಾದ  ಕರ್ಮವು ಸತ್ಕರ್ಮವೆನಿಸುವುದಷ್ಟೇ !

                 ನಾರದರು ತ್ರಿಲೋಕ  ಸಂಚಾರಿಗಳು . ವಾಡಿಕೆಯಂತೆ  ಭೂಲೋಕವನ್ನು  ನೋಡಿಕೊಂಡು  ದೇವಲೋಕಕ್ಕೆ  ಹೋದರು . ಅಲ್ಲಿ   ಬ್ರಹ್ಮ , ವಿಷ್ಣು , ಮಹೇಶ್ವರರ  ಪತ್ನಿಯರಾದ  ಸರಸ್ವತಿ ,ಲಕ್ಷ್ಮಿ , ಪಾರ್ವತಿಯರಿಗೆ  ತಾವೇ ಅತ್ಯುಚ್ಚ  ಪತಿವ್ರತೆಯರೆಂಬ  ಅಹಂಕಾರವುಂಟಾಗಿತ್ತು . ಭೂಲೋಕದಲ್ಲಿ  ಅತ್ರಿಮಹರ್ಷಿಯು  ಹೆಂಡತಿ  ಅನಸೂಯೆಯು  ದೊಡ್ಡ ಪತಿವ್ರತೆಯಾಗಿದ್ದಳು . ಸರಸ್ವತಿ ಮೊದಲಾದವರ ಅಹಂಕಾರವನ್ನು ನಾಶಪಡಿಸ ಬೇಕೆಂದೂ  ಅನಸೂಯೆಯ  ಪಾತಿವ್ರತ್ಯದ ಮಹಿಮೆಯನ್ನು ಬೆಳಗಬೇಕೆಂದೂ ಮತ್ತು ಸದ್ಯಕ್ಕೆ ದತ್ತನೆಂದು  ಪೂಜಿಸಲ್ಪಡುವ   ತ್ರಿಮೂರ್ತಿಗೆ  ಜಗತ್ತಿನ ಕಲ್ಯಾಣಕ್ಕಾಗಿ  ಅವತರಿಸಲು  ಸಮಯವುಂಟಾಗಲೆಂದೂ  ನಾರದರು  ಕಲಹದ ಬೀಜವನ್ನು ಬಿತ್ತಿದರು . 'ಅನಸೂಯೆಯ  ಪತಿವ್ರತಾ ಧರ್ಮದ  ಮುಂದೆ , ನಿಮ್ಮದು  ಸೂರ್ಯನ  ಮುಂದೆ  ಹೊನ್ನಿ  ಹುಳುವು ಬೆಳಗಿದಂತೆ ' ಎಂದು ಸರಸ್ವತಿ  ಮೊದಲಾದವರಲ್ಲಿ  ಮತ್ಸರವುಂಟಾಗುವಂತೆ  ಹೇಳಿದರು . ಅದರಿಂದಾಗಿ  ಅವರು ಅನಸೂಯೆಯ ಸತ್ವಭಂಗ  ಮಾಡಲು , ತಂತಮ್ಮ ಪತಿಗಳನ್ನು ಆಗ್ರಹಪಡಿಸಿದರು .

                  ಬ್ರಹ್ಮ , ವಿಷ್ಣು , ಮಹೇಶರು  ಅದಕ್ಕಾಗಿ  ವೃದ್ಧ  ಬ್ರಾಹ್ಮಣ ವೇಷವನ್ನು  ಧರಿಸಿದರು . ಪತಿಧರ್ಮಪರಾಯಣಳಾದ
ಅತ್ರಿಮಹರ್ಷಿಯ  ಹೆಂಡತಿ  ಅನಸೂಯೆಯು  ಆಶ್ರಮದಲ್ಲಿ  ಒಬ್ಬಳೇ ಇರುವ ಸಮಯವನ್ನು ಸಾಧಿಸಿ ,ಅಲ್ಲಿಗೆ ಬಂದರು  ಮತ್ತು
ವಸ್ತ್ರಹೀನಳಾಗಿ  ತಮಗೆ  ಉಣಬಡಿಸಬೇಕೆಂದು  ಕೇಳಿದರು . ಹಾಗೆ ಮಾಡದಿದ್ದರೆ ಹಾಗೆ ಮರಳಿ ಹೋಗುವುದಾಗಿಯೂ  ಹೇಳಿದರು . ಈ ಮಾತು ಕೇಳಿ ಅನಸೂಯೆಯು  ಜಗದ್ಜನನಿಯನ್ನು ಪ್ರಾರ್ಥಿಸಿ ಹಾಗು ಪತಿಯನ್ನು ನೆನೆದು ಊಟದ ಪದಾರ್ಥಗಳನ್ನು ತೆಗೆದುಕೊಂಡು ಬಡಿಸಲು   ಹೊರಗೆ ಬಂದಾಗ ತ್ರಿಮೂರ್ತಿಗಳು ಬಾಲರೂಪವನ್ನು ಹೊಂದಿ
ಅಳತೊಡಗಿದರು .ಬಾಲ ರೂಪದ  ಶಿಶುಗಳಿಗೆ ತಾಯಿಯಂತೆ ಉಣಬಡಿಸಿದಳು . ಹೀಗೆ ತ್ರಿಮೂರ್ತಿಗಳಿಗೆ  ತಾಯಿಯಾದಳು ಅನಸೂಯೆ .

                      ಅನಸೂಯೆಯ ಪಾತಿವ್ರತ್ಯ ಪ್ರಭಾವದಿಂದ ಸಂತುಷ್ಟರಾಗಿ , ತಮ್ಮ  ನಿಜಸ್ವರೂಪದಲ್ಲಿ ಪ್ರಕಟರಾದರು.  ಅವರು ಆ ಮೂರು  ಕೂಸುಗಳನ್ನು ಸಂತೋಷದಿಂದ ಅವಳಿಗೆ ಅರ್ಪಿಸಿದರು . ಆ ಕೂಸುಗಳಿಗೆ ಅನುಕ್ರಮವಾಗಿ  ಸೋಮ , ದತ್ತ  ಮತ್ತು ದುರ್ವಾಸ  ಎಂದು  ಹೆಸರಿಸಲಾಯಿತು .  ಈ ಬಾಲಕರು  ದೊಡ್ಡವರಾದ ಮೇಲೆ ದುರ್ವಾಸನು  ತಪಾಚರಣೆಗಾಗಿ  ಹೊರಟು  ಹೋದನು . ಸೋಮನು  ತನ್ನ  ಚಂದ್ರಮಂಡಲವನ್ನು   ಸೇರಿದನು . ಆದರೆ ಮಹಾತ್ಮ  ದತ್ತನು ಮಾತ್ರ ತಾಯಿ -ತಂದೆಯನ್ನು  ಸುಖಪಡಿಸುತ್ತ  ಆಶ್ರಮದಲ್ಲಿ ಉಳಿದನು . ಅತ್ರಿಪುತ್ರನಾದ್ದರಿಂದ  ಆತ್ರೇಯನು ,ಅತ್ರಿಗೆ  ದೇವತೆಗಳಿಂದ ಕೊಡಲ್ಪಟ್ಟ  ಮೂಲಕ ದತ್ತನು . ಅದಕ್ಕಾಗಿ ದತ್ತಾತ್ರೇಯನೆಂಬ  ಅಭಿದಾನವುಂಟಾಯಿತು .

                      ದತ್ತನು  ನಡೆದ ಮನ್ವಂತರದ  ಆರಂಭದಲ್ಲಿ ಮೊದಲನೆಯ ಪರ್ಯಯದೊಳಗಿನ ತ್ರೇತಾಯುಗದಲ್ಲಿ ಜನಿಸಿದನು . ಇವನು ಪರಮ ಬ್ರಹ್ಮ ನಿಷ್ಟನಾಗಿದ್ದನು . ಅಲರ್ಕ , ಪ್ರಹ್ಲಾದ , ಯದು ಮತ್ತು ಸಹಸ್ರಾರ್ಜುನರು  ಈತನ ಶಿಷ್ಯರಾಗಿ  ಬ್ರಹ್ಮವಿದ್ಯೆಯನ್ನು  ಪಡೆದರು . ಸೃಷ್ಟಿ ಕ್ರಮದಂತೆ ಒಂಬತ್ತು ತಿಂಗಳು ಗರ್ಭವಾಸವನ್ನು ಭೋಗಿಸಿ , ಮಾರ್ಗಶೀರ್ಷ  ಮಾಸದ  ಪೌರ್ಣಿಮೆ (ಹುಣ್ಣಿಮೆ )ಗೆ  ಅನಸೂಯೆಯ ಉದರದಿಂದ ದತ್ತನು ಜನಸಿದಂತೆ  ಸ್ಕಂದ ಪುರಾಣದಲ್ಲಿ  ಉಲ್ಲೇಖವುಂಟು . ಅಥರ್ವಣವೇದೋಪನಿಷತ್ತಿಗೆ  ದತ್ತಾತ್ರೇಯ  ಎಂದು ಹೆಸರಿದೆ .

                     
ದತ್ತನ  ಸ್ವರೂಪ -


                       ತ್ರಿಮೂರ್ತಿದರ್ಶಕವಾಗಿ  ಮೂರು  ಮೋರೆ , ಆರು ಕೈಗಳು , ಎರಡು ಕಾಲುಗಳು  ಉಂಟು . ಚತುರ್ವೇದ ದರ್ಶಕ  ನಾಲ್ಕು ನಾಯಿಗಳು  ಮತ್ತು ಸಮೀಪದಲ್ಲಿಯೇ  ಒಂದು ಕಾಮಧೇನು ಈ ಬಗೆಯಾಗಿದೆ .


                       ಕಲಿಯುಗದಲ್ಲಿ  ತಾತ್ಕಾಲಿಕ  ಫಲವನ್ನು ಕೊಡುವ ದೈವತ್ವವು  ದತ್ತನ  ಹೊರತು ಬೇರೊಂದಿಲ್ಲ ; ಜಾಗೃತಿ  ಇಲ್ಲವೇ ಸ್ವಪ್ನ ಸೃಷ್ಟಿಯಲ್ಲಿ ಸಾಕ್ಷಾತ್ಕಾರವನ್ನು ತೋರುವ ದೈವತ್ವವು ಇದೇ ! ಗುರು ಚರಿತ್ರೆಯಲ್ಲಿ ಬಣ್ಣಿಸಲಾದ  ಕಥೆಗಳಿಂದ ಈ ಮಾತು ಸತ್ಯವೆಂದೆನಿಸುವುದು .



ಕಾಷಾಯ ವಸ್ತ್ರಮ್ ಕರದಂಡ  ಧಾರಿಣಂ  ಕಮಂಡಲುಂ  ಪದ್ಮ ಕರೇಣ  ಶಂಖಂ ।
ಚಕ್ರಂ  ಗಧಾಭೂಷಿತ  ಭೂಷಣಾಢಯ್ಮ್   ಶ್ರೀಪಾದ ರಾಜಂ  ಶರಣಂ ಪ್ರಪದ್ಯೇ। ।೧।।

ಔದುಂಬರಃ  ಕಲ್ಪವೃಕ್ಷಃ  ಸಂಗಮಃ  ಕಾಮದೇವನವಃ ।
ಚಿಂತಾಮಣಿಗುರೋಹ್  ಪಾದಂ ದುರ್ಲಭಂ  ಭುವನತ್ರಯೇ ।।೨।।

ಕೃತೇ ಜನಾರ್ದನೋ ದೇವಃ ತ್ರೇತಾಯಾಂ  ರಘುನಂದನಃ ।
ದ್ವಾಪರೇ  ರಾಮಕೃಷ್ನೌ  ಚ ಕಲೌ ಶ್ರೀಪಾದ ವಲ್ಲಭಃ ।।೩।।

ಅರ್ಥ - ಕಾವಿ  ಬಟ್ಟೆಯನುಟ್ಟುವ , ದಂಡ ಕಮಂಡಲು  ಧರಿಸಿದವ , ಶಂಖ , ಚಕ್ರ  ಮತ್ತು ಗದೆಗಳಿಂದ  ಭೂಷಿತವಾದ  ಕರಕಮಲಗಳಿಂದ  ಭೂಷಣಗೊಂಡವ  ಇಂತಹ  ಶ್ರೀಪಾದರಾಜನಿಗೆ  ಶರಣಾಗತನಾಗುವೆ . (೧) ದತ್ತನು ವಾಸಿಸುವ ಔದುಂಬರ ( ಅತ್ತಿ ಗಿಡ ) ಕಲ್ಪವೃಕ್ಷವು, ಸಂಗಮವೆ  ಕಾಮಧೇನುವು  ಮತ್ತು ಗುರುವಿನ ಪಾದವೇ ಚಿಂತಿಸಿದ್ದನ್ನು ಕೊಡುವ ಚಿಂತಾಮಣಿಯು . (ಈ ಯೋಗವು )ಮೂರು ಲೋಕಗಳಲ್ಲಿಯೂ  ದುರ್ಲಭವು . (೨) ಕೃತಯುಗದಲ್ಲಿ ದೇವನು  ಜನಾರ್ದನನು. ತ್ರೇತಾಯುಗದಲ್ಲಿ ರಘುನಂದನನು , ಅಂದರೆ ರಾಮಚಂದ್ರನು . ದ್ವಾಪರ ಯುಗದಲ್ಲಿ ಬಲರಾಮ ಶ್ರೀ ಕೃಷ್ಣರು  ಮತ್ತು ಕಲಿಯುಗದಲ್ಲಿ ಶ್ರೀಪಾದ ವಲ್ಲಭ (ದತ್ತ )ನು .ಆಯಾ ಯುಗಗಳಲ್ಲಿ  ಆಯಾ ದೇವತೆಗಳ ಭಕ್ತಿಯು ತೀವ್ರವೇ ಫಲಿಸುತಿತ್ತು, ಫಲಿಸುವುದು . 

No comments :

Post a Comment